ಭಾನುವಾರ, ಅಕ್ಟೋಬರ್ 07, 2012

ಮಂಟೇಸ್ವಾಮಿ ಕತೆ ಮತ್ತು ಕರ್ನಾಟಕದ ಒಗ್ಗಟ್ಟು

ಕರ್ನಾಟಕ ಜಾನಪದದ ತವರೂರು ಎಂಬುದನ್ನು ಎಲ್ಲರು ಬಲ್ಲವರೇ. ಈ ಜಾನಪದದಲ್ಲಿ ನಡೆಸುವ ಹುಡುಕಾಟಗಳು ಕರ್ನಾಟಕದ ದಿಟವಾದ ನಡವಳಿಯನ್ನು ಮತ್ತು ಕರ್ನಾಟಕದ ಹಲಮಂದಿಯ ಬದುಕಿನ ಬಗೆಯನ್ನು ಅರಿಯಲು ನೆರವೀಯಬಲ್ಲುದು. ತೆಂಕು ಕರ್ನಾಟಕದಲ್ಲಿ ಹೆಚ್ಚು ಮಂದಿಯೊಲವು ಗಳಿಸಿರುವುದು ಮಲೆಯ ಮಾದಪ್ಪ ಮತ್ತು ಮಂಟೇಸ್ವಾಮಿ ಎಂಬ ಜನಪದ ದೇವರುಗಳು. ಇವರಿಬ್ಬರು ಬುಡಕಟ್ಟಿನ ಜನಗಳು ಇರುವ ತಾವಿನಲ್ಲೇ ನೆಲೆಯೂರಿದರು ಎಂಬುದು ಗಮನಿಸಬೇಕಾದುದು. ಈ ಮಂಟೇಸ್ವಾಮಿಯವರ ಬಗ್ಗೆ ಹಲವು ಹೊತ್ತಿಗೆಗಳನ್ನು ಓದುತ್ತಿದ್ದಾಗ ಮಂಟೇಸ್ವಾಮಿಯವರು ದೂರದ ಬೀದರಿನ ಕಲ್ಯಾಣದಿಂದ ಬಂದವರೆಂದೂ ಮತ್ತು ಮಂಡ್ಯ, ಮಯ್ಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ದಲಿತರು, ಉಪ್ಪಾಲಿಗರು, ಗವ್ಡರು, ಲಿಂಗಾಯತರು ಮತ್ತು ಅರಸುಗಳು ಮೊದಲಾಂತೆ ಎಲ್ಲ ಜಾತಿಯ ಜನರ ಒಲವನ್ನು ಗಳಿಸಿ ’ದರೆಗೆ ದೊಡ್ಡವರು’ ಆದರು ಎಂಬುದು ತಿಳಿಯುತ್ತದೆ. 
       ಇಶ್ಟಾದರೂ ಮಂಟೇಸ್ವಾಮಿ ಜನಪದರ ಎಣಿಕೆಯ(ಊಹೆಯ) ದೇವನೊ ಇಲ್ಲವೊ ಹಿನ್ನಡವಳಿಯಲ್ಲಿ ದಿಟವಾಗಿ ಹಾದು ಬಂದವನೊ ಎಂಬುದನ್ನು ನಿಕ್ಕಿಯಾಗಿ ಯಾರು ಹೇಳುವುದಿಲ್ಲ. ಆದರೆ ಕೆಲವರು ಈತನ ಕಾಲ ೧೬ನೇ ನೂರೇಡು ಇರಬಹುದೆಂದು ಹೇಳಿದ್ದಾರೆ. ಅದು ದಿಟವೊ ಅಲ್ಲವೊ ಅದು ಇಲ್ಲಿ ಮುಕ್ಯವಲ್ಲ ಯಾಕಂದರೆ ಅದು ಬರೀ ಜನಪದೀಯವಾಗಿದ್ದರೂ ತೆಂಕು ಕರ್ನಾಟಕದಲ್ಲಿ ಮಂಟೇಸ್ವಾಮಿಯ ಕತೆ ಹೇಳುವವರಿಗೆ ಅಂದರೆ ನೀಲಗಾರರಿಗೆ(ನೀಲಗಾರರು ಇಂತಹ ಒಂದು ಬುಡಕಟ್ಟಿನವರು - ಇವರ ಕೆಲಸವೇ ಮಂಟೇಸ್ವಾಮಿ ಕತೆಯನ್ನು ಹಾಡುವುದು) ದೂರದ ಕಲ್ಯಾಣದ ಬಗ್ಗೆ ಹೇಗೆ ಗೊತ್ತಿತ್ತು? ಅದೂ ಅಲ್ಲದೆ ಅಶ್ಟು ದೂರದ ಕಲ್ಯಾಣವನ್ನೇ ಏಕೆ ಆಯ್ದುಕೊಂಡರು ಎಂಬುದು ಒಂದು ಗಳಿಗೆ ಸೋಜಿಗದಂತೆ ತೋರುವುದು. ಆದರೆ ಕಲ್ಯಾಣ ಎಂಬುದು ಬರೀ ಒಂದು ಊರಾಗಿ ಕನ್ನಡಿಗರಲ್ಲಿ ಉಳಿದಿಲ್ಲ ಅದೊಂದು ಸಿಡಿದೇಳುವಿಕೆಯ ನಡುವಣ( centre of Revolution)ವೆಂದೇ ಕನ್ನಡದ ಕೂಡಣದಲ್ಲಿ ಅಚ್ಚೊತ್ತಾಗಿದೆ. ಹಾಗಾಗಿ ಈ ಕನ್ನಡ ನೆಲದಲ್ಲಿ ತುಳಿತಕ್ಕೊಳಗಾದವರು ಎಲ್ಲೆ ಇರಲಿ ಅವರಿಗೆ ಕಲ್ಯಾಣ ಒಂದು ಬಯಕೆಬೆಟ್ಟವಾಗಿ ಕಾಣುತ್ತದೆ. ಕಲ್ಯಾಣ ಎಂದರೆ ಬಸವಣ್ಣ, ಕಲ್ಯಾಣ ಎಂದರೆ ಶರಣರು, ಕಲ್ಯಾಣ ಎಂದರೆ ವಚನ ಚಳುವಳಿ ಎಂಬುದು ಕನ್ನಡ ನಾಡಿನ ಮಂದಿಬಗೆಯಲ್ಲಿ ಅಚ್ಚೊತ್ತಿದೆ. ಹಾಗಾಗಿ ಇಲ್ಲಿ ಜನಪದೀಯರಿಗೆ ಕಲ್ಯಾಣದೊಂದಿಗೆ ತಳುಕು ಹಾಕಿಕೊಳ್ಳುವ ಕಡುಬಯಕೆ ಕಾಡುತ್ತದೆ. ಆ ಕಡುಬಯಕೆಯ ಕಡಲಿನಿಂದ ಎದ್ದು ಬಂದ ಹೊಸ ಅಲೆಯೇ ಈ ಮಂಟೇಸ್ವಾಮಿ ಎಂಬ ಜನಪದ ದೇವರು. 
        ಚಿಕ್ಕದಾಗಿ ಹೇಳುವುದಾದರೆ ಮಂಟೇಸ್ವಾಮಿ ಮತ್ತು ಅಲ್ಲಮಪ್ರಬು ಕಲ್ಯಾಣಕ್ಕೆ ಹೋಗಿ ಅಲ್ಲಿ ಬಸವಣ್ಣನ ’ಇಶ್ಟಲಿಂಗ’ ಚಳುವಳಿಯಲ್ಲಿರುವ ಪೊಳ್ಳುತನ ಇಲ್ಲವೆ ಇಶ್ಟಲಿಂಗವೂ ಕದಲಿಕೆಯನ್ನು(ಜಂಗಮತನವನ್ನು) ಕಳೆದುಕೊಳ್ಳುತ್ತಿರುವ ಒಂದು ಆಚರಣೆ ಎಂದು ಎಚ್ಚರಿಸುವುದೇ ಈ ಕತೆಯ ಒಂದು ಮುಕ್ಯ ಅಂಶ. ಕರ್ನಾಟಕದ ಒಗ್ಗಟ್ಟಿನ ಕಣ್ಣಿನಿಂದ ಮಂಟೇಸ್ವಾಮಿಯ ಕತೆಯನ್ನು ನೋಡಿದಾಗ ಇದು ತೆಂಕು ಕರ್ನಾಟಕದ ಜನಪದಕ್ಕೂ ಮತ್ತು ಇವತ್ತಿನ ಬಡಗು ಕರ್ನಾಟಕದ ತುತ್ತತುದಿಯಲ್ಲಿರುವ ಕಲ್ಯಾಣಕ್ಕೂ ಇರುವ ನಂಟನ್ನು ಎತ್ತಿ ಹಿಡಿಯುತ್ತದೆ. ತೆಂಕು ಕರ್ನಾಟಕದ ತುದಿಯಲ್ಲಿರುವ ಮಂಡ್ಯ/ಚಾಮರಾಜನಗದಲ್ಲಿರುವ ಜನಪದ ಹಾಡುಗಾರನಿಗೆ ಬಡಗು ಕರ್ನಾಟಕದ ಕಲ್ಯಾಣದ ಬಗ್ಗೆ ಅಶ್ಟು ಮಾಹಿತಿ ತಿಳಿದದ್ದಾದರೂ ಹೇಗೆ? ಅದೂ ಆ ಕಾಲದಲ್ಲಿ ಅಂದರೆ ಅರುಹು ಮತ್ತು ಸಾರಿಗೆ ಅಶ್ಟು ಬೆಳೆದಿಲ್ಲದ ಆ ಕಾಲದಲ್ಲಿ. ಅದಕ್ಕೇ ಕಾರಣವೇ ಕನ್ನಡ ನುಡಿ ಅಂದರೆ ಕನ್ನಡ ನುಡಿಯಲ್ಲಿ ಹೇಳಲಾದ ’ವಚನಗಳು’(ಆಮೇಲೆ ಇದನ್ನು ಬರಹ ರೂಪಕ್ಕೆ ಇಳಿಸಲಾಯಿತು)ಎಂದರ್ತ. ಹೇಗೆ ಕೂಡಣದ(ಸಮಾಜದ) ಕಟ್ಟ ಕಡೆಯ ಆಳಿಗೂ ವಚನಗಳು ಮುಟ್ಟಿತ್ತು ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಈ ಕನ್ನಡದ ವಚನಗಳು ದೂರದ ಬೀದರಿನ ಕಲ್ಯಾಣವನ್ನು ಮತ್ತು ಚಾಮರಾಜನಗರದ ಕೊಳ್ಳೇಗಾಲವನ್ನು ಹತ್ತಿರ ತರುವ ಇಲ್ಲವೆ ಬೆಸೆಯುವ ಕೆಲಸವನ್ನು ಮಾಡಿತು ಎಂಬುದನ್ನು ಇದರಿಂದ ತಿಳಿಯಬಹುದು. ಹೇಗೆ ಒಂದು ನುಡಿಯು, ನೆಲದಳತೆಯಲ್ಲಿ ದೂರ ದೂರ ಇದ್ದ ಊರುಗಳನ್ನು ಮತ್ತು ಆ ಊರುಗಳ ಜನರನ್ನು ನಡವಳಿಯ ನೆಲೆಯಲಿ ಒಂದುಗೂಡಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ನುಡಿಗೂ ಮತ್ತು ನಡವಳಿಗೂ ಒಂದಕ್ಕೊಂದು ಬಿಡಿಸಿಕೊಳ್ಳಲಾರದಶ್ಟು ಹೆಣೆದುಕೊಂಡಿವೆ ಎಂಬ ಈ ಮಾತನ್ನು ಮಂಟೇಸ್ವಾಮಿಯ ಕತೆಯು ಒತ್ತಿ ಒತ್ತಿ ಹೇಳಿ ನಮಗೆ ಮನದಟ್ಟು ಮಾಡಿಸುತ್ತದೆ.

1 ಕಾಮೆಂಟ್‌:

ಇಮ್ಮಡಿ ಪುಲಕೇಶಿ ಹೇಳಿದರು...

ಮಂಟೆ ಸ್ವಾಮಿ ಅಥವ ಮಂಟೇದ ಲಿಂಗಯ್ಯ ಕಲ್ಯಾಣದಿಂದ ಬಂದರು ಎಂಬುದು ಕೇವಲ ಜಾನಪದದ ಉತ್ಪ್ರೇಕ್ಷೆ ಇರಬಹುದು! ನೀವೇ ತಿಳಿಸಿರುವಂತೆ ಕಲ್ಯಾಣ ಎಂಬುದು ಸಿಡಿದೇಳುವಿಕೆಯ ಕೇಂದ್ರ! ಇದೇ ಕಾರಣಕ್ಕೆ ಮಂಟೇಸ್ವಾಮಿಯ ಮೂಲವನ್ನು ಕಲ್ಯಾಣಕ್ಕೆ ಕರೆದೊಯ್ದಿರುವ ಸಾಧ್ಯತೆ ಇದೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಮಂಟೇಸ್ವಾಮಿಯ ಊರಾದ ಮಂಡ್ಯ (ಮಂಡಯ) ಪದದ ನಿರ್ವಚನ ಮತ್ತು ಪದಶಾಸ್ತ್ರವನ್ನು ತಿಳಿಯುತ್ತಾ ಹೋದರೆ, ಆ ಹೆಸರಿಗೆ ಮೂಲ ಮಾಂಡವ್ಯ ಮತ್ತು ಮಂಟೇಸ್ವಾಮಿ ಎಂಬುದು ತಿಳಿಯುತ್ತದೆ! ಮಂಟೆಯ - ಮಂಡ್ಯ ಎಂದರೆ ಜಟೆ ಕಟ್ಟುವವರ ಊರು, ತಲೆ ತುಂಬ ಕೂದಲು ಹೊಂದಿರುವವರ ಊರು, ಎನ್ನಲಾಗುತ್ತದೆ. ಮಂಟೇದ ಲಿಂಗಯ್ಯ ಮತ್ತು ಮಾಂಡವ್ಯರು ಸಹ ಜಟೆಗಟ್ಟಿದವರೇ ಆಗಿದ್ದಾರೆಮಂಟೆ ಸ್ವಾಮಿ ಅಥವ ಮಂಟೇದ ಲಿಂಗಯ್ಯ ಕಲ್ಯಾಣದಿಂದ ಬಂದರು ಎಂಬುದು ಕೇವಲ ಜಾನಪದದ ಉತ್ಪ್ರೇಕ್ಷೆ ಇರಬಹುದು! ನೀವೇ ತಿಳಿಸಿರುವಂತೆ ಕಲ್ಯಾಣ ಎಂಬುದು ಸಿಡಿದೇಳುವಿಕೆಯ ಕೇಂದ್ರ! ಇದೇ ಕಾರಣಕ್ಕೆ ಮಂಟೇಸ್ವಾಮಿಯ ಮೂಲವನ್ನು ಕಲ್ಯಾಣಕ್ಕೆ ಕರೆದೊಯ್ದಿರುವ ಸಾಧ್ಯತೆ ಇದೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಮಂಟೇಸ್ವಾಮಿಯ ಊರಾದ ಮಂಡ್ಯ (ಮಂಡಯ) ಪದದ ನಿರ್ವಚನ ಮತ್ತು ಪದಶಾಸ್ತ್ರವನ್ನು ತಿಳಿಯುತ್ತಾ ಹೋದರೆ, ಆ ಹೆಸರಿಗೆ ಮೂಲ ಮಾಂಡವ್ಯ ಮತ್ತು ಮಂಟೇಸ್ವಾಮಿ ಎಂಬುದು ತಿಳಿಯುತ್ತದೆ! ಮಂಟೆಯ - ಮಂಡ್ಯ ಎಂದರೆ ಜಟೆ ಕಟ್ಟುವವರ ಊರು, ತಲೆ ತುಂಬ ಕೂದಲು ಹೊಂದಿರುವವರ ಊರು, ಎನ್ನಲಾಗುತ್ತದೆ. ಮಂಟೇದ ಲಿಂಗಯ್ಯ ಮತ್ತು ಮಾಂಡವ್ಯರು ಸಹ ಜಟೆಗಟ್ಟಿದವರೇ ಆಗಿದ್ದಾರೆ.

ಮಂಟ-ಯ ವನ್ನು ನಾಗರೀಕತೆಯ ಪೂರ್ವದ ವಾಸಸ್ಥಾನವೆಂದೂ ಹೇಳಲಾಗಿದೆ.
ಇನ್ನು ಇದನ್ನು ಹೊರತುಪಡಿಸಿ, ಮಂಟ - ಮಂಟೆ ಎಂಬುದಕ್ಕೆ ಕ್ರಿಯಾರ್ಥವೂ ಇದೆ. ಮಂಟ್ ಹಾಕು ಎಂದರೆ ನೆಲವನ್ನು ಬೇಸಾಯಕ್ಕೆ ಹದ ಮಾಡು. ಸಿದ್ಧ ಮಾಡು ಉಳುಮೆ ಮಾಡು ಎಂದರ್ಥ. ಮಂಡ್ಯ ಮತ್ತು ಹಳೆ ಮೈಸೂರು ಭಾಗದ ಮೂಲನಿವಾಸಿಗಳು ಎನಿಸಿಕೊಳ್ಳುವ ಹೊಲಯರು ಮತ್ತು ಒಕ್ಕಲಿಗರ ಕುಲ ಕಸುಬು ಸಹ ಬೇಸಾಯವೇ ಆಗಿರುವುದನ್ನು ಗಮನಿಸಬಹುದು.

ಇನ್ನು ಭಾಷಾ ಶೈಲಿಯಲ್ಲಿಯು ಸಹ ಉತ್ತರ ಕರ್ನಾಟಕದ ಭಾಷೆಯೊಂದಿಗೆ ಪದವಿನಿಮಯಗಳಾಗಿಲ್ಲ ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಮಂಟೇದಲಿಂಗಯ್ಯ ಮಂಟೆದವರೆ. ಬೀದರಿನವರಲ್ಲ ಎಂಬುದಕ್ಕೆ ಇಷ್ಟು ಇನ್ನು ಭಾಷಾ ಶೈಲಿಯಲ್ಲಿಯು ಸಹ ಉತ್ತರ ಕರ್ನಾಟಕದ ಭಾಷೆಯೊಂದಿಗೆ ಪದವಿನಿಮಯಗಳಾಗಿಲ್ಲ ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಮಂಟೇದಲಿಂಗಯ್ಯ ಮಂಟೆದವರೆ. ಬೀದರಿನವರಲ್ಲ ಎಂಬುದಕ್ಕೆ ಇಷ್ಟು ಸಾಕಲ್ಲವೆ?
ಜಾನಪದೀಯ ನೆಂಟನ್ನು ಅವಗಣನೆ ಮಾಡುವಂತಿಲ್ಲವಾದರೂ ಅದನ್ನು ಉತ್ಪ್ರೇಕ್ಷೆಯಂದಷ್ಟೇ ಪರಿಗಣಿಸಬೇಕಿದೆ!