ಬುಧವಾರ, ಜೂನ್ 27, 2012

ಕನ್ನಡ ಮಾತಿಗೆ ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ, ಇಂಗ್ಲಿಶೂ ಅನಿವಾರ್ಯವಲ್ಲ

ಯು. ಆರ್. ಅನಂತ ಮೂರ್ತಿಯವರು ಹೇಳಿರುವುದು ಪ್ರಜಾವಾಣಿಯಲ್ಲಿ ಮೇಲಿನ ಬರಹ ಹೊರಬಂದಿದೆ. ಅದಕ್ಕೆ ಇದಿರುಬರಹವಿದು. ಅನಂತಮೂರ್ತಿಯವರ ಕೆಲವು ಹೇಳಿಕೆಗಳು ಗೊಂದಲದಿಂದ ಕೂಡಿದೆ.

ಮೊದಲಿಗೆ,

"ಒಂದು ಕಾಲದಲ್ಲಿ ಕನ್ನಡ ಬಾಶೆಗೆ ಸಂಸ್ಕ್ರುತ ಅನಿವಾರ್ಯ ಆಗಿತ್ತು. ಈಗ ಕನ್ನಡಕ್ಕೆ ಇಂಗ್ಲಿಶ್ ಅನಿವಾರ್ಯ ಬಾಶೆ ಅನಿಸಿದೆ."

ಇಲ್ಲಿ ಅನಂತಮೂರ್ತಿ(ಅ.ಮೂ)ಯವರು ಕನ್ನಡದ ’ಬರಹ’ದ ಬಗ್ಗೆ ಮಾತಾಡಿತ್ತಿರುವರೊ ಇಲ್ಲವೆ ’ಮಾತಿ’ನ ಬಗೆಗೊ ಎಂಬುದು ತಿಳಿಯಾಗಿಲ್ಲ. ಇರಲಿ; ಒಂದು ವೇಳೆ ಅವರು ಕನ್ನಡ ಮಾತಿನ ಬಗ್ಗೆ ಆಗಿದ್ದರೆ ಅವರ ನಿಲುವು ತಪ್ಪೆಂದು ಹೇಳಬೇಕಾಗುತ್ತದೆ. ಯಾಕಂದರೆ ಸಹಜವಾಗಿ ಯಾವುದೇ ಎರಡು ನುಡಿಗಳು ಒಟ್ಟಿಗೆ ಬಂದಾಗ ಹೇಗೆ ’ಕೊಡುಕೊಳು’ ಆಗುತ್ತದೆಯೋ ಹಾಗೆಯೇ ಕನ್ನಡ ಮತ್ತು ಸಂಸ್ಕ್ರುತದ ನಡುವೆ ಕೊಡುಕೊಳು ಆಗಿದೆ. ಅದರಂತೆಯೇ ಕನ್ನಡದಲ್ಲಿ ಸಂಸ್ಕ್ರುತದ ಕೆಲವು ಎರವಲು ಪದಗಳು ಸೇರಿಕೊಂಡಿವೆ. ಹಾಗೆಯೇ ಕನ್ನಡದಿಂದ ಸಂಸ್ಕ್ರುತಕ್ಕೂ ಕೆಲವು ಪದಗಳು ಹೋಗಿವೆ.ಎತ್ತುಗೆಗೆ: ಮೀನು.

ಇದನ್ನೇ ಮುಂದಿಟ್ಟುಕೊಂಡು ಕನ್ನಡಕ್ಕೆ ಮಾತಿಗೆ ಸಂಸ್ಕ್ರುತ ಬಾಶೆ ಅನಿವಾರ್ಯವಾಗಿತ್ತು ಅಂತ ಹೇಳುವುದು ಸರಿಯಲ್ಲ.
ಒಂದು ವೇಳೆ ಅ.ಮೂ ರವರು ಕನ್ನಡದ ಬರಹದ ಬಗ್ಗೆ ಮಾತನಾಡಿದ್ದರೆ ಅವರ ಈ ಮಾತು ಸರಿ ಎಂದು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಹೀಗೆ ಎತ್ತಿ ಹೇಳುವುದು ಬೇಕಾಗಿರಲಿಲ್ಲ ಯಾಕಂದರೆ ತೀರ ಇತ್ತೀಚೆನವರೆಗೂ ’ಕನ್ನಡ ಬರಹ’ ಎಲ್ಲ ಕನ್ನಡ ಮಂದಿಯನ್ನು ತಲುಪಿರಲಿಲ್ಲ ಇಲ್ಲವೆ ಇನ್ನೂ ತಲುಪಿಲ್ಲ. ಯಾವ ವಸ್ತು( ಕನ್ನಡ ಬರಹ) ಹೆಚ್ಚಿನ ಕನ್ನಡ ಮಂದಿಯನ್ನು ತಲುಪಿಯೇ ಇಲ್ಲವೊ ಅದನ್ನು ಚರ್ಚೆ ಮಾಡಿ ಏನು ಬಳಕೆ? ’ಕನ್ನಡ ಬರಹ’ ಎನ್ನುವುದು ಮೇಲ್ವರ್ಗದವರ ಸೊತ್ತಾಗಿ ಇತ್ತು ಇನ್ನೂ ಇದೆ. ಕೆಲವು ಸಂಸ್ಕ್ರುತ ಬಲ್ಲವರು ಉಂಟು ಮಾಡಿದ ’ಕನ್ನಡ ಬರಹ’ವನ್ನು ಎತ್ತುಗೆಯನ್ನಾಗಿ ಮಾಡಿಕೊಂಡು ನಿಲುವನ್ನು ಮುಂದಿಡುವುದು ಎಶ್ಟು ಸರಿ? ಈ ರೀತಿಯ ಕನ್ನಡದ (ಮಾತು ಮತ್ತು ಬರಹ) ಬಗೆಗಿನ ಸೀಳುನೋಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲದೆ ತಪ್ಪು ತಪ್ಪಾದ ನಿಲುವುಗಳತ್ತ ನಮ್ಮನ್ನು ಕೊಂಡೊಯುತ್ತವೆ.

ಎಂದಿಗೂ ಕನ್ನಡಕ್ಕೆ ( ಅಂದರೆ ಮಾತಿಗೆ...ಯಾಕಂದರೆ ಮಾತೇ ಇಲ್ಲಿ ಮೊದಲು ಮತ್ತು ಮುಕ್ಯ) ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ. ಇಂಗ್ಲಿಶ್ ಕೂಡ ಅನಿವಾರ್ಯಾಗಿಲ್ಲ/ಅನಿವಾರ್ಯವಾಗೊಲ್ಲ. ಇದು ’ಬರಹ’ ಹುಟ್ಟಿಸಿರುವ ಒಂದು ಬ್ರಮೆಯಲ್ಲದೇ ಬೇರೇನಲ್ಲ.

"ನಾಡಿನ ಎಲ್ಲ ಮಕ್ಕಳು ಸರ್ಕಾರಿ ಶಾಲೆಗಲಲ್ಲಿ ಕಲಿಯುವಂತಹ ವ್ಯವಸ್ತೆ ನಿರ್ಮಾಣವಾಗಬೇಕು"

ಇದು ಒಂದು ತಿಳಿಹೇಳುವಿಕೆಯ ಮಾತಿನಂತೆ ಇದೆ. ಆದರೂ ಅ.ಮೂ.ರವರ ಒಳ್ಳೆಯ ಗುರಿ ಇಟ್ಟುಕೊಂಡು ಈ ಮಾತು ಹೇಳಿದ್ದಾರೆ. ಆದರೆ ಮಾನವ ಕಟ್ಟಿರುವ ’ಸರ್ಕಾರ’ ಎಂಬ ಏರ್ಪಾಟಿನಲ್ಲಿ ಕೆಲಸಗಳು ತುಂಬಾ ಮೆಲ್ಲಗೆ ನಡೆಯುತ್ತದೆ. ಅ.ಮೂ.ರವರ ಮಾತನ್ನು ಎಸಕಕ್ಕೆ ತರುವುದು ಅಶ್ಟು ಸುಲಬದ ಮಾತಲ್ಲ. ಹಾಗಾಗಿ ಇಂತಹ ಮಾತುಗಳು ಪೋಲಾಗಿ
ಗಾಳಿಯಲ್ಲಿ ತೇಲುತ್ತವೆಯಶ್ಟೆ. ಹಾಗಾದರೆ ಇದಕ್ಕೆ ಬಗೆಹರಿಕೆ ಏನು? ಅಂತ ಕೇಳ್ವಿ ನಮ್ಮ ಮುಂದೆ ಬರುತ್ತದೆ.
ಎಸಕಬಲ್ಲ(practicable) ಆಯ್ಕೆ ಯಾವುದೆಂದರೆ ಸರ್ಕಾರದ ಕಲಿಮನೆಗಳ ಜೊತೆಜೊತೆಗೆ ಕನ್ನಡ ಒಯ್ಯುಗೆಯಲ್ಲಿ ಮೇಲ್ಮಟ್ಟದ ಕಾಸಗಿ ಕಲಿಮನೆಗಳನ್ನು ಕಟ್ಟುವುದು. ಈಗ ಇಂಗ್ಲಿಶ್ ಒಯ್ಯುಗೆ ಬೇಕೆಂದು ಹಪಹಪಿಸುತ್ತಿರುವವರನ್ನು ಕನ್ನಡದ ಒಯ್ಯುಗೆಯೆಡೆಗೆ ಕೊಂಡೊಯ್ಯುವಶ್ಟು ಒಳ್ಳೆ ಕಲಿಮನೆಗಳನ್ನು ಕಟ್ಟಿದರೆ ಕಾಸಗಿ ಕಲಿಮನೆಗಳಿಗೆ ಮಂದಿ ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕನ್ನಡದ ಬರಹವನ್ನು ನಲ್ಬರಹಕ್ಕೆ ಮೊಟಕುಗೊಳಿಸದೆ ಅರಿಮೆಯ ಬರಹವನ್ನಾಗಿ ಮಾರ್ಪಡಿಸಬೇಕು. ಅಂದರೆ ಕನ್ನಡದಲ್ಲೇ ಹೊಸಗಾಲದ ಅರಿಮೆಗಳು ಸಿಗುವಂತಾಗಬೇಕು. ಹಾಗೆ ಆಗಬೇಕಾದರೆ ಕನ್ನಡದ್ದೇ ಆದ ಪದಗಳು ಬೇಕು. ಈ ಪದಗಳಿಂದಾದ ಓದುಗೆಗಳು ಬೇಕು. ಇಂತಹ ಒಂದು ಕಲಿಕೆಯೇರ್ಪಾಡಿನಿಂದ ಹೊರಬರುವವರು ಮುಂದೆ ಕನ್ನಡದಲ್ಲೇ ಹೊಸ ಹೊಸ ಅರಿಮೆಗಳನ್ನು ಹುಟ್ಟಿಸಬಲ್ಲರು. ಈ ಅರಿಮೆಗಳಿಂದನೇ ಕನ್ನಡಿಗರು ಏಳಿಗೆಯೆಡೆಗೆ ನಡೆಯಬಲ್ಲರು. ಹೆರವರ ಜೊತೆ ಸಾಟಿಯಾಗಿ ನಿಲ್ಲಬಲ್ಲರು.

ಭಾನುವಾರ, ಜೂನ್ 24, 2012

ಚಿದಾನಂದ ಮೂರ್ತಿಯವರ ಬರಹಕ್ಕೆ ಇದಿರುಬರಹ


ಹಿರಿಯರಾದ ಚಿದಾನಂದ ಮೂರ್ತಿಗಳು ಹಲವು ವಿಶಯಗಳನ್ನು ತಮ್ಮ ಬರಹದಲ್ಲಿ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಹಲವು ಪೊಳ್ಳುತನದಿಂದ ಕೂಡಿರುವುದರಿಂದ ಇದರ ಬಗ್ಗೆ ಮರುನುಡಿಯಬೇಕಾಗಿದೆ.

೧. ಇಂಗ್ಲಿಶ್ ಸ್ಪೆಲ್ಲಿಂಗ್ ತೊಡಕಿದೆ. ಕನ್ನಡದಲ್ಲೂ ಇರಲಿ. ತಪ್ಪೇನು?
ಇಂಗ್ಲಿಶ್ ಎಂದಿಗೂ ಒಂದು ಪೊನೆಟಿಕ್ (ಉಲಿಕೆಗೆ ಅನುಗುಣವಾಗಿ) ನುಡಿಯಾಗಿರಲಿಲ್ಲ ಹಾಗಾಗಿ ಇಂಗ್ಲಿಶಿನಲ್ಲಿ ಹೇರಳ ಸ್ಪೆಲ್ಲಿಂಗ್ ತೊಡಕುಗಳು ಉಂಟಾಗಿವೆ. ಆದರೆ ಕನ್ನಡದಲ್ಲಿ ಅಂತಹ ದೊಡ್ಡ ಮಟ್ಟದ ಸ್ಪೆಲ್ಲಿಂಗ್ ತೊಡಕಿಲ್ಲ ಯಾಕಂದರೆ ಆ ತೊಡಕು ಇರುವುದು ಸಂಸ್ಕ್ರುತದಿಂದ ಎರವಲು ಪಡೆದ ಪದಗಳಿಗೆ ಮಾತ್ರ. ಆದರೆ ಇಂದಿನ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಸಂಸ್ಕ್ರುತದ ಪದಗಳು ಕಾಲಿಡುತ್ತಿರುವುದರಿಂದ ಈ ಸ್ಪೆಲ್ಲಿಂಗ್ ತೊಡಕು ದೊಡ್ಡದಾಗಿ ಕಾಣಿಸುತ್ತದೆ. ಹಾಗಾಗಿ ಡಿ.ಎನ್. ಶಂಕರಬಟ್ಟರು ಈ ಎರಡು ಹೊಳಹುಗಳನ್ನು ಸೂಚಿಸಿದ್ದಾರೆ.

     ಅ) ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆಯನ್ನು ತಗ್ಗಿಸುವುದು.
     ಆ) ಈಗಿರುವ ಕನ್ನಡ ಬರಹದಲ್ಲಿರುವ ಬೇಡದಿರುವ ಕೆಲವು ಬರಿಗೆಗಳನ್ನು ಕನ್ನಡ ಬರಹಮಾಲೆಯಿಂಡ ಕಯ್ ಬಿಡುವುದು.

ಈ ಬರಿಗೆಗಳನ್ನು ಕಯ್ ಬಿಡುವ ಕೆಲಸವನ್ನು ಮಾಡಿದವರಲ್ಲಿ ಶಂಕರಬಟ್ಟರು ಮೊದಲಿಗರೇನಲ್ಲ.. ನಡುಗನ್ನಡದ ಕವಿ ಹರಿಹರ ಮೊದಲು ’ೞ’ ಮತ್ತು ’ಱ’ ಗಳನ್ನು ಕಯ್ ಬಿಟ್ಟು ಬರೆಯಲು ತೊಡಗಿ ಆಮೇಲೆ ಹೆಚ್ಚಿನವರು ಅವನ ದಾರಿಯನ್ನೇ ಪಾಲಿಸಿದರು. ಹಾಗಾಗಿ ಹೊಸಗನ್ನಡದಲ್ಲಿ ನಾವು ’ೞ’, ಮತ್ತು ’ಱ್’ ಗಳನ್ನು ಉಳಿಸಿಕೊಂಡಿಲ್ಲ. ಎಶ್ಟೊ ಕನ್ನಡಿಗರಿಗೆ ಈ ಬರಿಗೆಗಳ ಪರಿಚಯವೂ ಇಲ್ಲ. ಹಾಗಾಗಿ ಅಂತಹ ದೊಡ್ಡದಾದ ಆಬಾಸವಾಗಲಿ ಆಗುತ್ತಿದೆ ಎಂದು ಯಾರು ಹೇಳುತ್ತಿಲ್ಲ. ಹಳೆಗನ್ನಡವನ್ನು ಓದುವ ಕೆಲವೇ ಕೆಲವರು ’ಱ’ ಮತ್ತು ’ೞ’ ಗಳನ್ನು ತಿಳಿದುಕೊಂಡು ಓದುತ್ತಿದ್ದಾರೆ. ಮಹಾಪ್ರಾಣವನ್ನು ನಾವು ಇದೇ ರೀತಿ ಇರಿಸಬಹುದು. ಎಲ್ಲರೂ ಹೇಗೆ ಱ, ೞ ಹೇಗೆ ಕಲಿಯುತ್ತಿಲ್ಲವೊ ಹಾಗೆ ಎಲ್ಲರೂ ಮಹಾಪ್ರಾಣವನ್ನು ಕಲಿಯಬೇಕಾಗಿಲ್ಲ. ಇದಲ್ಲದೆ ಮಾತಿಗೆ ತಕ್ಕಂತೆ ತಮ್ಮ ಲಿಪಿಯನ್ನು ಅಣಿಗೊಳಿಸಿಕೊಂಡಿರುವ ಪಿನ್ನಿಶ್ ನುಡಿಯ ಬಗ್ಗೆ ಚಿ.ಮೂರವರು ತಿಳಿದುಕೊಂಡಿಲ್ಲ ಅಂತ ಕಾಣಿಸುತ್ತೆ. ಇದನ್ನು ಶಂಕರಬಟ್ಟರು ತಮ್ಮ ಹೊತ್ತಗೆಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂಗ್ಲಿಶಿನಂತೆ ಎಲ್ಲ ಪದಗಳಿಗೆ ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳವ ಗೊಡವೆ ಪಿನ್ನಿಶ್ ನುಡಿಯಲ್ಲಿ ಇಲ್ಲ. ಹಾಗಾಗಿ ಪಿನ್ನಿಶ್ ನುಡಿಯಲ್ಲಿ ಅವರು ಜಗತ್ತಿನಲ್ಲೇ ಮೇಲ್ಮಟ್ಟದ ಕಲಿಕೆಯೇರ್ಪಾಟನ್ನು ಕಟ್ಟಿದ್ದಾರೆ.

೨. ಮಹಾಪ್ರಾಣಗಳನ್ನು ಬಿಟ್ಟರೆ ಆಬಾಸವಾಗುತ್ತದೆ
ಚಿದಾನಂದ ಮೂರ್ತಿಯವರು ಬೇಕೆಂದೇ ಹಲವು ವಿಶಯಗಳನ್ನು ಮುಚ್ಚಿಟ್ಟಿದ್ದಾರೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಿಗೆಮಾಲೆಯನ್ನು ಹಳೆಗನ್ನಡ/ನಡುಗನ್ನಡದ ಕವಿಗಳು ಪಾಲಿಸಿದ್ದಾರೆ.
ಎತ್ತುಗೆಗೆ:
     ಅ) ಕವಿರಾಜಮಾರ್ಗದಲಿ ’ದೋಸಮಿನಿತೆಂದು..." ಎಂಬ ಪದ್ಯವಿದೆ. ಗಮನಿಸಿ ಇದರಲ್ಲಿ ’ದೋಸ’ ಎಂದೇ ಬಳಸಲಾಗಿದೆಯೇ ಹೊರತು ’ದೋಷ’ ಎಂದು ಬಳಸಲಾಗಿಲ್ಲ. ’ಋಷಿ’ ಎಂದು ಈಗ ಬರೆಯಲಾಗುತ್ತಿರುವ ಪದವನ್ನು ಹಳೆಗನ್ನಡಲ್ಲಿ ’ರಿಸಿ’ ಎಂದೇ ಬರೆಯಲಾಗಿತ್ತಿತ್ತು, ಹಾಗಂತ ಕವಿರಾಜಮಾರ್ಗ ಇಲ್ಲವೆ ಇತರೆ ಓದುವಾಗ ಮಾನ್ಯ ಚಿದಾನಂದ ಮೂರ್ತಿಗಳಿಗೆ ಆಬಾಸವಾಗಲಿಲ್ಲವೇನೊ?

    ಆ) ಆಂಡಯ್ಯನ ’ಕಬ್ಬಿಗರ ಕಾವ’ದ ಬಗ್ಗೆ ಹೊಸಗನ್ನಡದಲ್ಲಿ ಸೀಳುನೋಟದ ಹಲವು .ಕ್ರುತಿಗಳು ಬಂದಿದೆ. ಆದರೆ 'ಕಬ್ಬಿಗರ ಕಾವ'ದಲ್ಲಿ ಎಲ್ಲೂ ಮಹಾಪ್ರಾಣಗಳನ್ನು ಬಳಸಿಲ್ಲ. ’ಘೋಷಣೆ’ ಯನ್ನು ’ಗೋಸಣೆ’ ಎಂದೇ ಆಂಡಯ್ಯನು ಬರೆದಿರುವುದು. ಈ ರೀತಿ ಬರೆಯುವುದು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಮತ್ತು ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡವನ್ನಾಗಿ ಮಾಡುವ ಮೊಗಸೇ ಆಗಿತ್ತು. ಹೀಗೆ ಆಂಡಯನನ್ನು ಓದುವಾಗ ಆಗದ ಆಬಾಸ ಈಗ ಏಕೆ ಆಗುತ್ತದೆ? ಚಿದಾನಂದ ಮೂರ್ತಿಯವರೇ ಇದಕ್ಕೆ ಉತ್ತರಕೊಡಬೇಕು. ಒಂದು ವೇಳೆ ಚಿದಾನಂದ ಮೂರ್ತಿಯವರಿಗೆ ಆಬಾಸವಾದರೂ ಎಲ್ಲ ಕನ್ನಡಿಗರಿಗೂ ಅದೇ ರೀತಿ ಆಬಾಸವಾಗುತ್ತದೆ ಎಂದು ಚಿದಾನಂದ ಮೂರ್ತಿಯವರು ಹೇಗೆ ಹೇಳುತ್ತಾರೆ?

ಇಶ್ಟಕ್ಕೂ ಮಹಾಪ್ರಾಣವಿರುವ ಒಂದೇ ಒಂದು ಕನ್ನಡದ್ದೇ ಆದ ಪದವನ್ನು ಚಿದಾನಂದ ಮೂರ್ತಿಯವರು ತೋರಿಸಿಕೊಡಲಿ.

೩. ಕನ್ನಡದಲ್ಲಿ ಉತ್ತಮ ಚಿಂತನೆ, ಬಾವನೆಗಳನ್ನು ವ್ಯಕ್ತ ಪಡಿಸಲಾರೆವು
ಯಾವುದೇ ಒಂದು ನುಡಿಗೆ ಅದರೇ ಆದ ಸೊಗಡು, ಹಿನ್ನಡವಳಿ ಇರುತ್ತದೆ. ಸಂಸ್ಕ್ರುತದಲ್ಲಿ ಹೊರತರುವ ಅನಿಸುಗಳು, ಉಂಕುಗಳು ಕನ್ನಡದಲ್ಲೂ ಇರಬೇಕೆನ್ನುವ ಒತ್ತಾಯವೇತಕ್ಕೆ? ಹಾಗೆ ಕನ್ನಡದಲ್ಲಿ ಹೊರತರುಬಹುದಾದ ವಿಶಯಗಳು ಸಂಸ್ಕ್ರುತದಲ್ಲಿ ತರಲಾಗುವುದಿಲ್ಲ. ’ಒಂದು’, ಎರಡು ಅಂತ ಸಂಸ್ಕ್ರುತದಲ್ಲಿ ಬರೆಯಲು ಆಗುವುದೇ ಇಲ್ಲ. ಅವನ್ನು ’ಓಂದು’ ಮತ್ತು ’ಏರಡು’ ಅಂತಲೇ ಸಂಸ್ಕ್ರುತದಲ್ಲಿ ಬರೆಯಬೇಕಾಗುತ್ತದೆ. ಇದನ್ನೇ ಮುಂದಿಟ್ಟುಕೊಂಡು ಸಂಸ್ಕ್ರುತದಲ್ಲಿ ಇಂತಹ ಸರಳ ವಿಶಯಗಳಾದ ಎಣಿಕೆಯನ್ನು ವ್ಯಕ್ತ ಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆಯೆ? ಆದ್ದರಿಂದ ಚಿದಾನಂದಮೂರ್ತಿಯವರು ಹೇಳುತ್ತಿರುವ ’ಕನ್ನಡದಲ್ಲಿ ಉತ್ತಮ ಭಾವನೆ ಮತ್ತು ಚಿಂತನೆಗಳನ್ನು ವ್ಯಕ್ತ ಪಡಿಸಲಾರೆವು’ ಎಂಬ ಮಾತಿನಲ್ಲಿ ಹುರುಳಿಲ್ಲ.

೪. ಸಂಸ್ಕ್ರುತದ ಮಂತ್ರಗಳನ್ನು ಸಂಸ್ಕ್ರುತದಲ್ಲಿರುವಂತೆ ನಾವು ಉಲಿಯದಿದ್ದರೂ ಬರೆಯಬೇಕು
ಚಿದಾನಂದ ಮೂರ್ತಿಯವರು ಹೇಳಿರುವ ಎಲ್ಲ ಮಂತ್ರಗಳು ಸಂಸ್ಕ್ರುತದ್ದವು ಕನ್ನಡದ್ದಲ್ಲ. ಇವನ್ನು ಹೆಚ್ಚು ಕನ್ನಡ ಮಂದಿಯೂ ತಮ್ಮ ದಿನಬಳಕೆಯಲ್ಲಿ ಬಳಸುವುದಿಲ್ಲ. ಕೆಲವರು ಬಳಸುತ್ತಿರುವವರು ಅದು ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಓದುವುದಿಲ್ಲ ಇಲ್ಲವೆ ಉಲಿಯುವುದಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಅದನ್ನ ಉಳಿಸಿಕೊಳ್ಳಬೇಕೆಂದು ಇವತ್ತಿನ ಕನ್ನಡ ಬರಹ ಬಲವಂತ ಪಡಿಸುತ್ತಿದೆ. ವಿಸರ್ಗದ ಬದಲಾಗಿ ’ಹ’ಕಾರವನ್ನೇ ಕನ್ನಡಿಗರು ಉಲಿಯುವುದು. ಕಿವಿಗೆ ’ಹ’ಕಾರ ಕೇಳಿದರೂ ಕಣ್ಣಿಗೆ ವಿಸರ್ಗವೇ ಏಕೆ ಕಾಣಿಸಬೇಕು? ಇನ್ನು ವಿಸರ್ಗವನ್ನು ಬಿಡುವುದರಿಂದ ಕನ್ನಡದ್ದೇ ಆದ ಪದಗಳಿಗೆ ಯಾವುದೇ ತೊಂದರೆಯಿಲ್ಲ.

೫. ಅಚ್ಚಗನ್ನಡದ ಪದಗಳ ಹುಟ್ಟು ವ್ಯರ್ತ ಕೆಲಸ ಎಂಬ ಉಪದೇಶ:
ಬರಿಗೆ, ಅರಿಮೆ ಮತ್ತು ಉಲಿಕೆ ಎಂಬ ಪದಗಳು ಉಂಟು ಮಾಡುವುದು ಬೇಕಾಗಿಲ್ಲ ಮತ್ತು ಇವು ಸಂಸ್ಕ್ರುತಕ್ಕಿಂತ ಕಟಿಣ ಎಂಬ ತಮ್ಮ ಅನಿಸಿಕೆಯನ್ನು ಅದೇಶವೆಂಬಂತೆ ಯಾವುದೇ ಕಾರಣ ಕೊಡದೇ ಹೊರಡಿಸಿದ್ದಾರೆ. ಎಲ್ಲರಿಗೂ ಸಾಮಾನ್ಯವಾಗಿ ಅರ್ತವಾಗುವ ಪದಗಳಾದ ಬರೆ, ಅರಿ ಮತ್ತು ಉಲಿ ಎಂಬ ಪದಗಳಿಂದ ಈ ಪದಗಳನ್ನು ಉಂಟುಮಾಡಲಾಗಿದೆ. ಕನ್ನಡಿಗರಿಗೆ ಕನ್ನಡಕ್ಕಿಂತ ಸಂಸ್ಕ್ರುತವೇ ಸುಲಬ ಎನ್ನುವ ಚಿ.ಮೂ ಅವರ ಮಾತನ್ನು ಯಾರಾದರೂ ಒಪ್ಪಲಾಗುತ್ತದೆಯೇ? ಆರಂಬಕಾರನಿಗೆ ಹೊಲ ಉಳುವುದು ಕಶ್ಟವೆ? ಕೋಗಿಲೆಗೆ ಇನಿದನಿ ಉಲಿಯುವುದು ಕಶ್ಟವೆ? ಹೂವಿಗೆ ಅರಳುವುದು ಕಶ್ಟವೆ? ಇದನ್ನು ಚಿ.ಮೂ ಅವರು ಕೊಂಚ ಯೋಚಿಸಲಿ. ಈ ರೀತಿ ಕನ್ನಡದಲ್ಲಿ ಪದವನ್ನು ಉಂಟು ಮಾಡದೇ ಸುಮ್ಮನೆ ’ಕನ್ನಡ! ಕನ್ನಡ!’ ಅಂತ ಬಡಿದುಕೊಳ್ಳುವುದರಲ್ಲಿ ಏನಿದೆ? ಚಿ.ಮೂ.ರವರು ಇಶ್ಟೊಂದು ಕನ್ನಡದ ಬಗೆಗಿನ ಅರಕೆಗಳನ್ನು ಮಾಡಿದ್ದು ಏತಕ್ಕೆ?

೬. ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲ
ಅವರ ಬರಹದ ತಲೆಬರಹದಲ್ಲಿ ಒಟ್ಟು ೬ ಪದಗಳಿವೆ ಅದರಲ್ಲಿ ೪ ಪದಗಳು(ಲಿಪಿ, ಸಂಸ್ಕರಣೆ,ಅನಗತ್ಯ,ಅಸಾಧ್ಯ) ಸಂಸ್ಕ್ರುತದ್ದು ಇನ್ನುಳಿದ ೨ ಕನ್ನಡದ್ದು ( ಕನ್ನಡ, ಮತ್ತು). ಅದನ್ನು ಹೀಗೆ ಬರೆಯಬಹುದಿತ್ತು ’ಕನ್ನಡ ಬರಹದಲ್ಲಿ ಮಾರ್ಪು ಬೇಕಾಗಿಲ್ಲ ಮತ್ತು ಆಗುವುದೂ ಇಲ್ಲ’. ಹೀಗೆ ಎಗ್ಗಿಲ್ಲದೆ ಸಂಸ್ಕ್ರುತದ ಎರವಲು ಪದಗಳನ್ನು ತಮ್ಮ ಬರಹದುದ್ದಕ್ಕೂ ಬಳಸಿರುವ ಚಿ.ಮೂ ಅವರು ’ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲಎಂದು ಹೇಗೆ ಹೇಳುತ್ತಾರೆ?

೭. ಕನ್ನಡಿಗರೆಲ್ಲರೂ ಈಗಿರುವ ಲಿಪಿ ಒಪ್ಪಿಕೊಂಡಿದ್ದಾರೆ.
ಮತ್ತೆ ಇವರು ಕನ್ನಡಿಗರಿಗೆ ಯಾವುದೇ ಕಾರಣ ಕೊಡದೇ ತಮ್ಮ ಆದೇಶವನ್ನು ಹೊರಡಿಸುತ್ತಿದ್ದಾರೆ. ಕೆಲವರು, ಅಂದರೆ ಸಂಸ್ಕ್ರುತ ಲಾಬಿಗಳು ಒಪ್ಪಿಕೊಂಡು ಹೇರಲಾದ ಲಿಪಿ ವ್ಯವಸ್ತೆಯನ್ನು ಸಾಮಾನ್ಯರು ಒಪ್ಪಿಕೊಂಡಿದ್ದಾರೆ ಎಂದು ಒಬ್ಬದಿಯ(one-sided) ಮಾತುಗಳನ್ನು ಚಿ.ಮೂರವರು ಮುಂದಿಟ್ಟಿದ್ದಾರೆ. ಆದರೆ ಈಗಲೂ ಕನ್ನಡ ಬರಹದಲ್ಲಿ ಆಗುತ್ತಿರುವ ’ತಪ್ಪು’ಗಳು ಅಂದರೆ ಸಂಸ್ಕ್ರುತದ ಪ್ರಕಾರ ಮಹಪ್ರಾಣ ಇರುವ ಕಡೆ ’ಮಹಾಪ್ರಾಣ’ ಇಲ್ಲದಿರುವುದು. ಮಹಾಪ್ರಾಣ ಇಲ್ಲದಿರುವ ಕಡೆ ಮಹಾಪ್ರಾಣ ಇರುವುದು ಗೊಂದಲವನ್ನು ಉಂಟುಮಾಡಿದೆ. ಈ ತರ ಕನ್ನಡಿಗರು ಮಹಾಪ್ರಾಣವನ್ನು ಒಪ್ಪದಿರುವಿಕೆಯನ್ನು ತೋರಿಸುತ್ತಲೇ ಇದ್ದಾರೆ.

ಕನ್ನಡ ಬರಹದಲ್ಲಿ ಹೆರನುಡಿಗಳನ್ನು ಉಲ್ಲೇಕ ಮಾಡುವುದು ತೀರ ವಿರಳ. ಅದಕ್ಕೋಸ್ಕರ ಕನ್ನಡಬರಹದಲ್ಲಿ ಮಹಾಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಎಶ್ಟು ಸರಿ. ನಮಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳುವುದು ವಾಡಿಕೆಯೇ ಹೊರತು ಹೆರವರಿಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳಲಾದೀತೆ?

ಕೊನೆಗೆ ಯಾವುದೇ ಅರಿಮೆಯ ಓಸುಗರಗಳನ್ನು ಕೊಡದೇ ’ಲಿಪಿ ಸುದಾರಣೆಯನ್ನು ಗಂಬೀರವಾಗಿ ಗಮನಿಸಬೇಕಾಗಿಲ್ಲ’ ಎಂದು ಹೇಳಿದ್ದಾರೆ. ಈಗಾಗಲೇ ಕನ್ನಡ ಬರಿಗೆ ಮಾಲೆಯು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪಾಗುತ್ತ ಬಂದಿದೆ. ಈ ಮಾರ್ಪಾಗುತ್ತಿರುವುದು ಕನ್ನಡಕ್ಕಿರುವ ಜೀವಂತಿಕೆಯನ್ನು ತೋರಿಸುತ್ತದೆ. ಹಾಗಾಗಿ ಹೊಸಗಾಲದ ಬೇಕು/ಬೇಡಗಳಿಗೆ ತಕ್ಕಂತೆ ಕನ್ನಡ ಬರಿಗೆಮಾಲೆಯನ್ನು ಅಣಿಗೊಳಿಸಿ ಹೊಸ ದಾರಿಯನ್ನು ತುಳಿಯುವ ಕನ್ನಡದ ಪರಂಪರೆಯನ್ನು ನಾವು ಮುಂದುವರೆಸಬೇಕಾಗಿದೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಹ ಮಾರ್ಪುಗಳನ್ನು ಅಳವಡಿಸಿದರೆ ಹೆಚ್ಚು ಕನ್ನಡಿಗರಿಗೆ ಬಳಕೆಯೇ ಹೊರತು ತೊಂದರೆಯಿಲ್ಲ ಎಂದು ದಾರಾಳವಾಗಿ ಮೇಲೆ ತಿಳಿಸಿದ ಕಾರಣಗಳಿಂದ ದಾರಳವಾಗಿ ನಾನು ಹೇಳಬಯಸುತ್ತೇನೆ.

ಬುಧವಾರ, ಜೂನ್ 13, 2012

'ಕನ್ನಡ ಮಾದ್ಯಮ' ಅನ್ನವೇ ಹೊರತು ಉಪ್ಪಿನಕಾಯಿಯಲ್ಲ

ಮಾನ್ಯರೆ,
  ಇತ್ತೀಚೆಗೆ ಸರಕಾರ ಇಂಗ್ಲಿಶ್ ಮಾದ್ಯಮದ ಕುರಿತು ತೆಗೆದುಕೊಂಡಿರುವ ನಿಲುವು ವೈಜ್ನಾನಿಕವಾಗಿ ಸರಿಯಾದುದಲ್ಲ. ದೂರದೃಶ್ಟಿಯಿಲ್ಲದೆ ತೆಗೆದುಕೊಂಡಿರುವ ನಿಲುವು ಇದಾಗಿದೆ. ಒಂದು ನಾಡಿನ ಕಲಿಕೆಯೇರ್ಪಾಡು ಕಟ್ಟುವಲ್ಲಿ ಅದನ್ನ ಕಟ್ಟುವವರ ದೂರದರ್ಶಿತ್ವ ಬಹು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಕಲಿಕೆಯೆಂಬುದನ್ನು ಪರಿಣಾಮಕಾರಿಯಾಗಿ ಮಾಡುವುದು ಅಶ್ಟು ಸುಲಬದ ಮಾತಲ್ಲ. ಇದಕ್ಕೆ ಹಲವು ಹಮ್ಮುಗೆಗಳನ್ನು ತಳಪಾಯದಿಂದ ಮಾಡಬೇಕಾಗುತ್ತದೆ. ಅದಕ್ಕಾಗಿ ಕಲಿಕೆಯರಿಗರು , ನುಡಿಯರಿಗರು ಮತ್ತು ಹಿರಿಯ ಚಿಂತಕರು ಕೂತು ಚರ್ಚೆ ನಡೆಸಬೇಕಾಗುತ್ತದೆ.ಆಂದಮೇಲೆ ಕಲಿಕೆಯರಿಗರು ಮತ್ತು ನುಡಿಯರಿಗರು ಈ ಕಲಿಕೆಯ ಮಾಧ್ಯಮನುಡಿಯ ಬಗ್ಗೆ ಏನು ಹೇಳುತ್ತಾರೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.  ಜಗತ್ತಿನ ಎಲ್ಲ ಕಲಿಕೆಯರಿಗರು ಒಕ್ಕೊರಲಿನಲ್ಲಿ 'ತಾಯ್ನುಡಿಯಲ್ಲೇ(ಅದಕ್ಕೆ ಹತ್ತಿರವಿರುವ ಪರಿಸರದ ನುಡಿಯಲ್ಲೇ) ಕಲಿಕೆ' ನಡೆದರೆ ಆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ ಮತ್ತು ಮುಂದೆ ಅವರು ಬದುಕಿನಲ್ಲಿ ಹೆಚ್ಚಿನದನ್ನು ಸಾದಿಸಬಹುದೆಂದು ಹೇಳುತ್ತಾರೆ. ಹೇಗೆ ನಾವು ಭೌತವಿಜ್ನಾನದ ವಿಶಯವನ್ನು ತಿಳಿದುಕೊಳ್ಳಲು ಭೌತವಿಜ್ನಾನಿಯ ನೆರವು ಪಡೆಯುತ್ತೇವೆಯೋ ಹಾಗೆ ಇಲ್ಲಿ ಕಲಿಕೆಯರಿಗರ(ಶಿಕ್ಶಣ ತಜ್ನರ) ಅಭಿಪ್ರಾಯ ಕೇಳಬೇಕಾಗುತ್ತದೆ ಯಾಕಂದರೆ ಅವರು ಈ ವಿಶಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುತ್ತಾರೆ ಮತ್ತು ಅದನ್ನು ಆಳವಾಗಿ ಅಭ್ಯಸಿಸಿರುತ್ತಾರೆ. ಇಂತಹ ಒಂದು ಸಿ.ಆರ್. ಚಂದ್ರಶೇಕರ್ ಅವರ ಬರಹ ಇತ್ತೀಚೆಗೆ ’ಸುಧಾ’ದಲ್ಲಿ ಪ್ರಕಟವಾಗಿತ್ತು.

ಬಡವರು, ದಲಿತರು ಇಂಗ್ಲಿಶ್ ಮಾಧ್ಯಮ ಕೇಳುತ್ತಿದ್ದಾರೆಅಶ್ಟೇ ಏಕೆ, ಪ್ರತಿ ಸಾಮಾನ್ಯ ಮನುಶ್ಯನಿಗೂ ತಾನು ಕೋಟಿ ಕೋಟಿ ಸಂಪಾದನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬಡವರು ಇಂಗ್ಲಿಶ್ ಮಾಧ್ಯಮ ಕೇಳುವುದು ತಪ್ಪಾ? ಅವರು ಮುಂದೆ ಬರಬಾರದೆ ಎಂಬ ಪ್ರಶ್ನೆಗಳನ್ನು ಇಂದು ಮುಂದಿಡಲಾಗುತ್ತಿದೆ.  ಅದಕ್ಕೆ ಉತ್ತರ ಇಶ್ಟೆ. ಎಲ್ಲರೂ ಮುಂದೆ ಬರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಕೋಟಿ ಕೋಟಿ ಹಣ ಸಂಪಾದನೆ ಮಾಡಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಣ ಸಂಪಾದನೆಗೆ ನಾವು ಕಾನೂನುಬಾಹಿರ, ಅವೈಜ್ನಾನಿಕ  ಮತ್ತು ಅನೈತಿಕ ದಾರಿ ಹಿಡಿಯುವುದು ಎಶ್ಟು ತಪ್ಪೊ ಹಾಗೆ ಬಡವರು ಮತ್ತು ಇಂಗ್ಲಿಶ್ ಪರಿಸರದಲ್ಲಿ ಇಲ್ಲದವರು(ಹೆಚ್ಚಿನ ಕನ್ನಡಿಗರು) ಇಂಗ್ಲಿಶ್ ಮಾದ್ಯಮವೆಂಬ 'ಅಡ್ಡದಾರಿ' ಹಿಡಿಯುವುದು ಅಶ್ಟೆ ತಪ್ಪು. ಯಾಕಂದರೆ ಪರಿಸರದಲ್ಲಿಲ್ಲದ ನುಡಿಯಲ್ಲಿ ಕಲಿಕೆ ಎಂದಿಗೂ ಏಳಿಗೆಯೆಡೆಗೆ ಕೊಂಡೂಯ್ಯುವುದಿಲ್ಲ ಎಂಬ ಮಾತು ಸೂರ್ಯನ ಬೆಳಕಿನಶ್ಟೆ ದಿಟ.  ಆಗ ತಾನೆ ಹುಟ್ಟಿದ ಮಗುವಿಗೆ  'ಎದೆಹಾಲು' ಹೇಗೆ ಮುಖ್ಯವೋ ಹಾಗೆಯೇ ಕಲಿಕೆಗೆ ಹೋಗುವ ಮಗುವಿಗೆ ತಾಯ್ನುಡಿಯೆಂಬ ಎದೆಹಾಲು ಅಶ್ಟೆ ಮುಖ್ಯ. ಯಾಕೆ ನಾವು ಆಗ ತಾನೆ ಹುಟ್ಟಿದ ಮಗುವಿಗೆ ಪಿಜ್ಜಾ, ಬರ್ಗರ್ ಎಲ್ಲವನ್ನು ತಂದುಕೊಡುವುದಿಲ್ಲ. ಇವನ್ನು ಕೊಟ್ಟರೆ ಆಧುನಿಕತೆ/ಮುಂದುವರೆದಿರುವಿಕೆಯನ್ನು ಮಗುವಿಗೆ ಮೈಗೂಡಿಸದಂತಾವುದಿಲ್ಲವೆ? ಎಂಬ ಪ್ರಶ್ನೆ ಎಶ್ಟು ಅವೈಜ್ನಾನಿಕವೊ ಅಶ್ಟೆ
ಅವೈಜ್ನಾನಿಕ ಈ ಕನ್ನಡಿಗರ ಕಲಿಕೆಯಲ್ಲಿ ಇಂಗ್ಲಿಶ್ ಮಾದ್ಯಮವೆಂಬ ಪಿಜ್ಜ/ಬರ್ಗರ್.

ಕೆಲವು ಸಾಹಿತಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತಿಲ್ಲ..ಯಾಕೆ?:-ಈ ಮೇಲಿನ ಕೇಳ್ವಿಯನ್ನು ಮುಖ್ಯಮಂತ್ರಿಯವರು ಮೊದಲಾಗಿ ಎಲ್ಲರೂ ಕೇಳುತ್ತಿದ್ದಾರೆ. ಕೆಲವು ಬೆರೆಳೆಣಿಕೆಯ ಸಾಹಿತಿಗಳು ತಮ್ಮ ಮಕ್ಕಳನ್ನು'ಕನ್ನಡ ಮಾಧ್ಯಮ'ಕ್ಕೆ ಕಳುಹಿಸಿದಿದ್ದರೇನಂತೆ? 'ತಾಯ್ನುಡಿಯಲ್ಲೇ ಕಲಿಕೆಯು ಉತ್ತಮ' ಎಂಬ ದಿಟವನ್ನು ಅಳಿಸಲಾಗುವುದೇ ? ಒಬ್ಬ ಹೆಸರುವಾಸಿಯಾದ ವೈದ್ಯರನ್ನು ಒಬ್ಬ 'ಸಿಗರೇಟ್ ಸೇದುಗ'ಎಂದು ಕಾರಣ ಕೊಟ್ಟು ಅವರ ಮಾತುಗಳು/ಸಲಹೆಗಳನ್ನು ಅಲ್ಲಗಳೆಯಲಾಗುವುದೇ? ಮೊದಲು ನಾವು ಅರಿಗರು ಏನು ಹೇಳುತ್ತಿದ್ದಾರೆ ಎಂಬುದರ ಗಮನ ಕಡೆ ಹರಿಸಬೇಕೇ ಹೊರತು ಅವರ ವೈಯಕ್ತಿಕ ಚಟುವಟಿಕೆಗಳ ಕಡೆ ಅಲ್ಲ.

ಬರೀ ಬಡವರೇ ಯಾಕೆ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡ ಉಳಿಸಬೇಕು?
.ಕನ್ನಡಿಗ ಯಾರೇ ಆಗಿರಲಿ ಬಡವನಾಗಿರಲಿ, ದಲಿತನಾಗಿರಲಿ ಮತ್ತು ಸಿರಿವಂತನಾಗಿರಲಿ ತಾನು 'ಕನ್ನಡ ಮಾಧ್ಯಮ'ದಲ್ಲಿ ಓದಿ ಕನ್ನಡ ಉಳಿಸುತ್ತೇನೆಂದು ಅಂದುಕೊಳ್ಳುವುದು ದೊಡ್ಡ ತಪ್ಪು. ಬದಲಾಗಿ ಕನ್ನಡ ಮಾಧ್ಯಮವು ಯಾವುದೇ ಕನ್ನಡಿಗನಿಗೆ ವಿಶಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ. ಇದರಿಂದ ಕನ್ನಡಿಗರಿಗೇ ಹೆಚ್ಚು ಉಪಯೋಗವೇ ಹೊರತು ಕನ್ನಡಕ್ಕಲ್ಲ(The prime beneficiary is Kannadiga not Kannada). ಕನ್ನಡಿಗರಿಗೆ 'ಕನ್ನಡ' ಒಂದು ಉತ್ತಮ ಕಲಿಕೆಯ ಸಾಧನವಶ್ಟೆ.  ಆ ಸಾಧನವನ್ನು ಬಳಸಿಕೊಂಡವರು ಹೆಚ್ಚಿನದನ್ನು ಸಾಧಿಸಬಹುದು. ಇಲ್ಲವಾದರೆ ಕನ್ನಡಿಗರಿಗೇನೆ ನಶ್ಟ ಹೊರತು ಕನ್ನಡಕ್ಕಲ್ಲ.
ಕನ್ನಡಿಗರೇ ಕನ್ನಡ ಮಾದ್ಯಮದಲ್ಲಿ ಓದದೇ ಮೇಲೆ ಕನ್ನಡವನ್ನು ಯಾತಕ್ಕೋಸ್ಕರ ಉಳಿಸಿಕೊಳ್ಳಬೇಕು? ಉಪ್ಪಿನಕಾಯಿ ಹಾಕಿಕೊಂಡು ನೆಕ್ಕುವುದಕ್ಕಾ?  'ಕನ್ನಡ ಉಳಿಸುವುದು' ಎನ್ನುವುದಕ್ಕೆ ಏನಾದರೂ ಅರ್ತ ಇದಿಯ?

'ಇಂಗ್ಲಿಶ್' ಏಳಿಗೆಯ ಶಾಶ್ವತ  ಕುರುಹಲ್ಲ ..ಯಾಕೆ?ಇಂದು ಇಂಗ್ಲಿಶಿನಲ್ಲಿ ಹಲವು ಅರಿಮೆಗಳು ಹುಟ್ಟುತ್ತಿರುವುದರಿಂದ 'ಇಂಗ್ಲಿಶ್' ಅರಿಮೆಯ,ಏಳಿಗೆಯ ಕುರುಹು ಎಂದು ಎಲ್ಲರು ಭಾವಿಸಿರುವಂತಿದೆ. ಆದರೆ ೨೦ ವರ್ಶಗಳ ನಂತರ  ಈ ಸ್ಥಿತಿ ಹೀಗೆ ಇರುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಇಂಗ್ಲಿಶಿನ ಜಾಗಕ್ಕೆ 'ಚೈನೀಸ್' ಬಂದು ಕೂತುಕೊಳ್ಳಬಹುದು. ಆಗ ನಮ್ಮ ಸರ್ಕಾರ 'ಚೈನೀಸ್' ಮಾಧ್ಯಮಕ್ಕೆ ಮಣೆ ಹಾಕುತ್ತೇನೊ?! ಈ ರೀತಿಯ ರಿಯಾಕ್ಟಿವ್ ಕಲಿಕೆಯೇರ್ಪಾಡುಗಳು ನಮ್ಮನ್ನು ದಿಕ್ಕುಗೆಡಿಸುತ್ತದೆಯೇ ಹೊರತು ಏಳಿಗೆಯೆಡೆಗೆ ಕೊಂಡೊಯ್ಯುವುದಿಲ್ಲ.

ಯಾವುದೇ ನೋಟದಿಂದ ನೋಡಿದರೂ 'ತಾಯ್ನುಡಿಯಲ್ಲೇ ಕಲಿಕೆಯೇ ಉತ್ತಮ' ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಟವನ್ನು ಅರಿತು ಸರಕಾರ ಕರ್ನಾಟಕದಲ್ಲಿ ದೂರಾಲೋಚನೆಯ ಮತ್ತು ಮೇಲ್ಮಟ್ಟದ ಕಲಿಕೆಯೇರ್ಪಾಡು ಕಟ್ಟಿದರೆ ಒಳಿತು.
ಕಲಿಕೆಯೆಂಬ ಊಟದಲ್ಲಿ ಕನ್ನಡವು ಅನ್ನವೇ ಹೊರತು ಕೊಳೆಸಿದ ಉಪ್ಪಿನಕಾಯಿಯಲ್ಲ. ಅನ್ನ ತಿಂದೇ ಹೊಟ್ಟೆ ಹೊರೆಸುಕೊಳ್ಳಬೇಕೇ ಹೊರತು ಬರೀ ಉಪ್ಪಿನಕಾಯಿ ತಿನ್ನಕ್ಕಾಗಲ್ಲ ಎಂಬುದನ್ನು ನಾವು ಅರ್ತ ಮಾಡಿಕೊಂಡರೆ ಸಾಕು.